Monday, 1 October 2018

Gandi jayanti

ಅಸತ್ಯದೊಡನೆ ಮಾಡುವ ಅಸಹಕಾರವನ್ನು ಅಥವಾ ಸತ್ಯಕ್ಕಾಗಿ ಎಸಗುವ ಆಗ್ರಹವನ್ನು ಗಾಂಧೀಜಿ ಸತ್ಯಾಗ್ರಹ ಎಂದು ಕರೆದರು. ಈ ಅಸಹಕಾರ ಯಾವ ಕಾರಣದಿಂದಲೂ ಅಹಿಂಸೆಗೆ ವಿರುದ್ಧವಾಗುವಂತಿಲ್ಲ. ಅದು ಹಿಂಸಾತ್ಮಕವಾದರೆ ಆಗ ಅದು ದುರಾಗ್ರಹವೆನಿಸುತ್ತದೆ. ಆದ್ದರಿಂದಲೇ ಸತ್ಯಾಗ್ರಹಿ ಪುರ್ಣ ಅಹಿಂಸವಾದಿಯಾಗಬೇಕೆಂಬ ನಿಯಮ. ತಾನು ಮಾಡುವ ಅಸಹಕಾರದಿಂದ ಎದುರಾಳಿಗೆ ಯಾವ ರೀತಿಯಿಂದಲೂ ಕೆಡುಕಾಗಬಾರದು. ಸತ್ಯಾಗ್ರಹಿ ಸದಾ ಎದುರಾಳಿಯ ಒಳಿತನ್ನೇ ಗಮನದಲ್ಲಟ್ಟಿರಬೇಕು. ಅಸತ್ಯಕ್ಕಂಟಿದ ಅವನ ಮನಸ್ಸನ್ನು ಪರಿವರ್ತಿಸಿ ಅವನ ಆತ್ಮೋನ್ನತಿಗೆ ಸಹಾಯ ಮಾಡುವುದೇ ಈ ಸತ್ಯಾಗ್ರಹದ ಮೂಲ ಉದ್ದೇಶ. ಎದುರಾಳಿಯಿಂದ ಸತ್ಯಾಗ್ರಹಿಗೆ ಎಷ್ಟೇ ನೋವಾದರೂ ಅದನ್ನು ಸಹಿಸುವ ಹೊಣೆಗಾರಿಕೆ ಇವನದು. ಸತ್ಯಾಗ್ರಹಿಯಲ್ಲಿ ಯಾವ ರಹಸ್ಯ, ಗುಟ್ಟು ಇಲ್ಲವೇ, ಕುತಂತ್ರವೂ ಇರಬಾರದು. ಸತ್ಯಾಗ್ರಹಿ ತಾನು ಮಾಡುವ ಕಾರ್ಯವಿಧಾನಗಳನ್ನೆಲ್ಲ ಪೂರ್ವಭಾವಿ ಯಾಗಿ ಎದುರಾಳಿಗೆ ತಿಳಿಸಿ ಅವನು ಅದಕ್ಕೆ ಬೇಕಾದ ಸಿದ್ಧತೆಗಳನ್ನೆಲ್ಲ ಮಾಡಿಕೊಳ್ಳಲು ನೆರವಾಗಬೇಕು. ಆ ಕಾರಣದಿಂದಲೇ ಗಾಂಧೀಜಿಯವರು ತಾವೆಸಗಿದ ಎಲ್ಲ ಸತ್ಯಾಗ್ರಹಗಳಿಗೂ ಮುನ್ನ ಅದರ ಕ್ರಮ ಮತ್ತು ಉದ್ದೇಶಗಳನ್ನು ಬ್ರಿಟಿಷ್ ಸರ್ಕಾರಕ್ಕೆ ತಿಳಿಸಿ ಅವರಿಗೆ ಯಾವ ರೀತಿಯ ಇಕ್ಕಟ್ಟೂ ಆಗದಂತೆ ನೋಡಿಕೊಳ್ಳ್ಳುತ್ತಿದ್ದರು.

ಗಾಂಧೀಜಿಯವರ ಅಭಿಪ್ರಾಯ ಅಹಿಂಸಾಚರಣೆಯ ಹೊಣೆಗಾರಿಕೆ ಮಿಕ್ಕೆಲ್ಲ ರಾಷ್ಟ್ರಗಳಿಗಿಂತಲೂ ಭಾರತಕ್ಕೆ ಹೆಚ್ಚು - ಎಂದು. ಅನೇಕ ಶತಮಾನಗಳ ದಾರ್ಶನಿಕ ಪರಂಪರೆಯನ್ನು ಹೊಂದಿರುವ ಭಾರತ ಅಹಿಂಸಾಚರಣೆಯಲ್ಲಿ ಮಿಕ್ಕ ರಾಷ್ಟ್ರಗಳಿಗಿಂತಲೂ ಮುಂದೆ ಹೋಗಿ ವಿಶ್ವಕ್ಕೆ ಅಹಿಂಸೆಯ ಸಂದೇಶ ನೀಡುವಂತಾಗಬೇಕು. - ಗಾಂಧೀಜಿಯವರ ಈ ನಂಬಿಕೆಗೆ ಪುಷ್ಟಿ ದೊರೆಯುವಂಥ ಕೆಲವು ನಿದರ್ಶನಗಳು ಇತ್ತೀಚಿನ ಕಾಲದಲ್ಲಿ ನಡೆಯುತ್ತಿರುವುದು ಒಂದು ಆಶಾದಾಯಕ ಚಿಹ್ನೆ. ಅಮೆರಿಕದ ನೀಗ್ರೋ ಜನ ವರ್ಣ ವೈಷಮ್ಯಕ್ಕೆ ಸಿಲುಕಿ ತೊಳಲಾಡುತ್ತಿದ್ದಾಗ ಗಾಂಧೀಜಿಯವರ ಅಹಿಂಸಾತತ್ತ್ವದಿಂದ ಪ್ರೇರಿತನಾದ ಮಾರ್ಟಿನ್ ಲೋಥರ್ ಕಿಂಗ್ ದ್ವೇಷರಹಿತ ಹೋರಾಟದಿಂದ ಬಿಳಿ ಜನರ ಮನಸ್ಸನ್ನೂ ಮಾರ್ಪಡಿಸುವಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾದ ನಿದರ್ಶನ ಇನ್ನೂ ಅಚ್ಚ ಹಸುರಾಗಿದೆ. 20ನೆಯ ಶತಮಾನದಲ್ಲಿ ಬಹು ವಿಚಾರಪರ ದಾರ್ಶನಿಕನೆನಿಸಿದ ಬರ್ಟ್ರೆಂಡ್ ರಸಲ್ ಯುದ್ಧ ದಾಹದಿಂದ ಉನ್ಮತ್ತರಾಗಿ, ವಿನಾಶಕಾರಕವಾದ ಅಣ್ವಸ್ತ್ರಗಳನ್ನು ಸೃಷ್ಟಿಸಿ, ಸರ್ವನಾಶಕ್ಕೆ ಉದ್ಯುಕ್ತರಾಗಿದ್ದ ಶಕ್ತ ರಾಷ್ಟ್ರಗಳ ಮನ ಒಲಿಸಲು ಬಳಸಿದ ಅಸ್ತ್ರದ ಸ್ವರೂಪವಾದರೂ ಏನು? ಶಾಂತಿಪ್ರಿಯರಾದ ಜನರೆನ್ನೆಲ್ಲ ತಮ್ಮ ಹಿಂದೆ ಸಾಲ್ಗೂಡಿಸಿ ಲಂಡನ್ ನಗರದ ಬೀದಿಗಳಲ್ಲಿ ಕಿಲೋಮೀಟರ್ ಗಟ್ಟಳೆ, ಮಳೆ ಚಳಿಯನ್ನು ಲೆಕ್ಕಿಸದೆ, ಪಾದಯಾತ್ರೆ ನಡೆಸಿ ವಿಶ್ವದ ಜನತೆಯ ಅಭಿಪ್ರಾಯವನ್ನೆಲ್ಲ ಶಾಂತಿಯ ಸಂದೇಶದತ್ತ ವಾಲುವಂತೆ ಮಾಡಿದ ರಸಲ್ಲನ ಈ ಮಾರ್ಗ ಗಾಂಧೀಜಿಯವರ ದಂಡಿಯಾತ್ರೆಯ ಪುನಃ ಸ್ಮರಣೆಯಂತಿದೆ.

ಹಾಗೆ ನೋಡುವುದಾದರೆ ಮಾನವ ಅನಾದಿಕಾಲದಿಂದ ಹಿಂಸಾಮಾರ್ಗವನ್ನು ತುಳಿದು ಅದರಲ್ಲಿ ನೂರಾರು ಪ್ರಯೋಗಗಳನ್ನು ಮಾಡಿ ಅದರಿಂದ ಈಗ ಬೇಸತ್ತಿದ್ದಾನೆ. ಅದು ಈಗ ಗತಕಾಲದ ಪಳೆಯುಳಿಕೆಯಂತಿದೆ. ಆದ್ದರಿಂದಲೇ ಈಗ ಅವನು ಅಹಿಂಸೆಯ ಅರುಣೋದಯದತ್ತ ಆಶಾವಾದಿಯಾಗಿ ಕಣ್ತೆರೆಯುತ್ತಿದ್ದಾನೆ.

No comments:

Post a Comment

ಕನ್ನಡ SSLC SCORING PACKAGE

  ಕೇವಲ 35 ಪುಟದಲ್ಲಿ ಕನ್ನಡ SCORING PACKAGE 2022-23